ಯಕ್ಷಗಾನದಲ್ಲಿ ಅತಿರೇಕ ಸಲ್ಲ: ಗೋಡೆ ನಾರಾಯಣ ಹೆಗಡೆ
ಲೇಖಕರು : ಉದಯವಾಣಿ
ಶುಕ್ರವಾರ, ಒಕ್ಟೋಬರ್ 9 , 2015
|
ಒಕ್ಟೋಬರ್ 9, 2015
|
ಯಕ್ಷಗಾನದಲ್ಲಿ ಅತಿರೇಕ ಸಲ್ಲ: ಗೋಡೆ ನಾರಾಯಣ ಹೆಗಡೆ
ಶಿರಸಿ :
ಯಕ್ಷಗಾನ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳು ಬರುತ್ತಿರುವುದು ಸಂತೋಷ ತಂದರೂ ರಂಗ ಸ್ಥಳಗಳಲ್ಲಿ ಆಖ್ಯಾನದಲ್ಲಿ ಕೆಲ ಅತಿರೇಕ ಸಂದರ್ಭಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗೋಡೆ ನಾರಾಯಣ ಹೆಗಡೆ ಹೇಳಿದರು.
ಮುಂಡಿಗೇಸರದ ಗಣಪತಿ ದೇವಾಲಯಲ್ಲಿ ಕಲಗದ್ದೆ ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ, ಅನಂತ ಯಕ್ಷ ಕಲಾ ಪ್ರತಿಷ್ಠಾನ ಜಂಟಿಯಾಗಿ ಹಮ್ಮಿಕೊಂಡ ಐದು ದಿನಗಳ ಯಕ್ಷ ಪಂಚೋತ್ಸವ ಕಾರ್ಯಕ್ರಮದಲ್ಲಿ ನೆಬ್ಬೂರು ಪ್ರತಿಷ್ಠಾನದ ವೇದಿಕೆಯಲ್ಲಿ ಗುರುವಾರದಂದು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಗತ್ತಿನಲ್ಲಿ ಅತಿ ಹೆಚ್ಚು ರಂಗ ಪ್ರದರ್ಶನಗಳು ನಡೆಯುವುದಿದ್ದರೆ ಅದು ಯಕ್ಷಗಾನವೇ ಆಗಿದೆ. ವರ್ಷಕ್ಕೆ ಸುಮಾರು 20 ಸಾವಿರ ಪ್ರಯೋಗಗಳು, 15 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ತಲುಪುವ ಹಾಗೂ ಕೋಟ್ಯಂತರ ರೂ. ವಹಿವಾಟು ಆಗುವ ಕಲೆ ಇದಾಗಿದೆ. ಹಿಂದಿದ್ದ ಕಷ್ಟ ಯಕ್ಷಗಾನಕ್ಕೆ ಇಂದಿಲ್ಲ. ಇದಕ್ಕೆ ಪ್ರೇಕ್ಷಕರ ಕಲಾ ಪ್ರೀತಿಯೇ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ನೆಬ್ಬೂರು ನಾರಾಯಣ ಭಾಗವತ, ಸಾಮಾಜಿಕ ಕಾರ್ಯಕರ್ತ ಎಸ್.ಕೆ. ಭಾಗವತ ಮಾತನಾಡಿದರು. ದೇವಾಲಯರ ಆಡಳಿತ ಮಂಡಳಿ ಕಾರ್ಯದರ್ಶಿ ರಾಜೀವ ಬಳಗಂಡಿ, ಡಿ.ಜಿ. ಹೆಗಡೆ ಅಬ್ರಿ, ಜಿ.ಎನ್. ಹೆಗಡೆ ಹೂತನ, ರವಿ ಹೆಗಡೆ ಹಳದೋಟ, ಜಿ.ಆರ್. ಹೆಗಡೆ ಬೆಳ್ಳೇಕೇರಿ, ಪ್ರತಿಷ್ಠಾನದ ವಿನಾಯಕ ಹೆಗಡೆ ಕಲಗದ್ದೆ ಇತರರು ಇದ್ದರು. ಉದಯ ಹೆಗಡೆ ಮುಂಡಿಗೇಸರ ಸ್ವಾಗತಿಸಿದರು. ಜಿ.ಎಸ್. ಭಟ್ಟ ವರ್ಗಾಸರ ಸನ್ಮಾನ ಪತ್ರ ವಾಚಿಸಿದರು. ಬಳಿಕ ಶ್ರೀರಾಮ ನಿರ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.
ಕೃಪೆ :
udayavani
|
|
|